ಜೆಡಿಎಸ್ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ್ದು ಖುಷಿ : ಗೊಂಡಬಾಳ
ಕೊಪ್ಪಳ: ಜೆಡಿಎಸ್ ಕರ್ನಾಟಕ ಸಿದ್ದರಾಮಯ್ಯ ಡಿಕೆಶಿ ನೇತೃತ್ವದ ಸರಕಾರ ಮಾಡಿರುವ ಪ್ರಮುಖ ಐದು ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಭಟಿಸಿ ಮಾತನಾಡಿದ್ದು ಖುಷಿ ತಂದಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಸಂತಸ ವ್ಯಕ್ತಪಡಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಕರ್ನಾಟಕ ಸರಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಲ್ಲಿ ಮಾತು ಕೊಟ್ಟ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಅದರಂತೆ ಗೃಹಲಕ್ಷ್ಮೀ ಮೂಲಕ ಬಡ ಹೆಣ್ಣುಮಕ್ಕಳ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ನಗದು ಡಿಬಿಟಿ ಮೂಲಕ ಜಮೆ ಮಾಡುತ್ತಿದೆ, ಇಲ್ಲಿ ನಕಲಿ, ಮೋಸ, ಅನುಷ್ಠಾನಗೊಳಿಸುವಲ್ಲಿ ವಿಫಲ ಎಂಬ ಕಥೆಗಳನ್ನು ಹೆಣೆಯಲು ಹೊರಟಿರುವದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ. ಮುಂದಿನ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಇವರನ್ನು ಹೀನಾಯವಾಗಿ ಸೋಲಿಸುತ್ತವೆ, ಕಾಂಗ್ರೆಸ್ ಗಟ್ಟಿಯಾಗುತ್ತದೆ ಎಂಬ ಭಯದಿಂದ ಹೀಗೆ ಮಾತನಾಡುತ್ತಿದ್ದಾರೆ.
ಹೋರಾಟಕ್ಕೆ ಬಂದ ಅನೇಕರು ತಮ್ಮ ಮನೆಯ ಹೆಣ್ಣುಮಕ್ಕಳ ಹೆಸರಲ್ಲಿ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎನ್ನುವದರಲ್ಲಿ ಎರಡು ಮಾತಿಲ್ಲ, ದಾಖಲೆ ಕೊಡಿ ಎಂದರೆ ಅದನ್ನೂ ಮಾಡುತ್ತೇವೆ ಎಂದಿರುವ ಅವರು, ಗೃಹಜ್ಯೋತಿ, ಶಕ್ತಿ, ಯುವನಿಧಿ ಮತ್ತು ಮಹತ್ವದ ಅನ್ನಭಾಗ್ಯ ಯೋಜನೆಗಳ ಮೂಲಕ ಬಡವರ ಬದುಕು ಹಸನಾಗಿದೆ. ಈ ಯೋಜನೆಗಳಿಂದ ಸರಕಾರ ಬರೋಬ್ಬರಿ ೫೬ ಸಾವಿರ ಕೋಟಿಗೂ ಅಧಿಕ ಹಣ ಖರ್ಚು ಮಾಡುತ್ತಿದೆ, ಇದು ಯಾರಪ್ಪನ ದುಡ್ಡೂ ಅಲ್ಲ, ಇದು ಜನರ ದುಡ್ಡು ಜನರಿಗೆ ಕೊಟ್ಟೀವಿ ಎಂದು ಸ್ವತಃ ಮುಖ್ಯಮಂತ್ರಿ ಅವರೇ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಸರಕಾರ ಈ ಯೋಜನೆ ಜಾರಿ ಮಾಡಿದಾಗ, ಅದಕ್ಕೂ ಮುಂಚೆ ಘೋಷಣೆ ಮಾಡಿದಾಗ ಬಿಜೆಪಿ, ಜೆಡಿಎಸ್ ಪಕ್ಷಗಳು ಇವುಗಳನ್ನು ಜಾರಿ ಮಡಲು ಸಾಧ್ಯವಿಲ್ಲ, ಹಣ ಏನು ಅವರ ಮನೆಯಲ್ಲಿ ಪ್ರಿಂಟ್ ಮಾಡ್ತಾರಾ ಎಂದು ಕೇಳಿದ್ದರು, ಈಗ ಸರಿಯಾಗಿ ಜಾರಿ ಮಾಡಿ ಎಂದು ಹೋರಾಟ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ಕದ್ದ ಮೋದಿ ಅವರು ದೆಹಲಿಯಲ್ಲಿ ಹೆಣ್ಣುಮಕ್ಕಳಿಗೆ ೨೫೦೦ ರೂ. ಹಣ ಕೊಡ್ತಿನಿ ಎಂದರು, ನಮ್ಮದು ಬಿಟ್ಟಿಭಾಗ್ಯ ಎಂದಾದರೆ ಅವರದು ಯಾವ ಭಾಗ್ಯ ಎಂದು ಮೊದಲು ತಿಳಿಸಲಿ.
ಜೆಡಿಎಸ್ ಹೋರಾಟ ಕೇವಲ ತಮ್ಮ ಅಸ್ತಿತ್ವವನ್ನು ಇಟ್ಟುಕೊಳ್ಳಲು ಮಾತ್ರ ಎಂಬುದು ಜನರಿಗೂ ಗೊತ್ತಿದೆ. ಮೇಲಾಗಿ ಈ ಎಲ್ಲಾ ಗ್ಯಾರಂಟಿಗಳಿಗೆ ಸ್ಪಷ್ಟ ಲೆಕ್ಕವಿದೆ, ನವೆಂಬರ್ ೨೦೨೪ರವರೆಗೆ ಹಣ ನೀಡಲಾಗಿದೆ. ಆದಷ್ಟು ಬೇಗ ಉಳಿದ ಎಲ್ಲಾ ಹಣವೂ ಬಿಡುಗಡೆಯಾಗಲಿದೆ. ಉಳಿದಂತೆ ಕೇಂದ್ರದ ಬಿಜೆಪಿ ಕಳೆದ ೧೧ ವರ್ಷದಲ್ಲಿ ಎಲ್ಲಾ ಬೆಲೆ ಹೆಚ್ಚಿಸಿ ದೇಶದ ಜನರನ್ನು ಮಂಗಮಾಡಿದೆ, ಮೊದಲು ಜೆಡಿಎಸ್ ಎನ್ಡಿಎದಿಂದ ಹೊರಬಂದು ಅವರ ವಿರುದ್ಧ ಹೋರಾಟ ಮಾಡಲಿ. ಇನ್ನು ಮೈಕ್ರೋ ಫೈನಾನ್ಸ್ಗಳನ್ನು ನೇರವಾಗಿ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾನೂನು ಮೂಲಕ ಸ್ಥಾಪಿತವಾಗಿವೆ ಹೊರತು ರಾಜ್ಯ ಸರಕಾರವಲ್ಲ, ಕೇಂದ್ರದ ಅಡಿಯಲ್ಲಿರುವ ಸರಕಾರಿ ಸ್ವಾಮ್ಯದ ಬ್ಯಾಂಕ್ಗಳು ಜನರಿಗೆ ಸರಿಯಾಗಿ ಅನುಕೂಲವಿಲ್ಲದ ಕಾರಣ, ಬಡವರಿಗೆ ದಲಿತರಿಗೆ ಇಲ್ಲದ ಕಾರಣ ಇಂತಹ ಅನೇಕ ಫೈನಾನ್ಸಗಳು ಗರಿಗೆದರಿವೆ, ಜನರು ಸಾಲದ ಸುಳಿಗೆ ಸಿಲುಕಿ ಸಾಯಲು ಮೋದಿ ನೀತಿಗಳೇ ಕಾರಣ, ಅದನ್ನು ತಗ್ಗಿಸಲು ರಾಜ್ಯದ ಕಾಂಗ್ರೆಸ್ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಅದಕ್ಕಾಗಿ ತಾಲೂಕ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಗ್ಯಾರಂಟಿ ಪ್ರಾಧಿಕಾರಗಳನ್ನು ರಚಿಸಿ ಜನರಿಗೆ ಸ್ಪಂದನೆ ನೀಡಲಾಗುತ್ತಿದೆ, ಜನರ ಪರ ಕಾವಲಿಗೆ ಈ ಪ್ರಾಧಿಕಾರಗಳು ನಿಂತಿವೆ, ನೇರವಾಗಿ ಡಿಬೇಟಿಗೆ ಬಂದರೆ ನಾವು ಗ್ಯಾರಂಟಿ ಯೋಜನೆ ಕುರಿತು ಮಾತನಾಲು ಸಿದ್ದವಿರುವದಾಗಿ ಗ್ಯಾರಂಟಿ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪಂಥಾವ್ಹಾನ ನೀಡಿದ್ದಾರೆ, ಜೆಡಿಎಸ್ ಸ್ವೀಕರಿಸುತ್ತಾ? ಕಾದು ನೋಡಬೇಕು.