ಬಲ್ಡೋಟಾ ಹೋರಾಟಕ್ಕೆ ೨೧ ದಿನ : ಹಿರಿಯ ನಾಗರಿಕರಿಂದ ಧರಣಿ
ನಮ್ಮದು ಮುಗೀತು, ನಮ್ಮ ಮಕ್ಕಳು ಮೊಮ್ಮಕ್ಕಳ ಬಗ್ಗೆ ಎಚ್ಚರವಹಿಸಬೇಕಿದೆ : ಜಡಿಯವರ

ಕೊಪ್ಪಳ: ೨೦ನೇ ದಿನದ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಬಲ್ಡೋಟಾ, ಕಿರ್ಲೋಸ್ಕರ, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್ಇಂಡಿಯಾ ಸೇರಿ ಇತರೆ ಕಾರ್ಖಾನೆಗಳ ವಿಸ್ತರಣೆ ಮತ್ತು ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿಗೆ ಕೊಪ್ಪಳ ಹಿರಿಯ ನಾಗರಿಕರ ವೇದಿಕೆ ಮತ್ತು ನಿವೃತ್ತ ಸರಕಾರಿ ನೌಕರರ ಸಂಘದ ಸದಸ್ಯರು ಬೆಂಬಲಿಸಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕ ಅಧ್ಯಕ್ಷರು, ನಿವೃತ್ತ ಪ್ರಾಂಶುಪಾಲ ಸಿ. ವಿ. ಜಡಿಯವರ ಅವರು, ಜಿಲ್ಲಾ ಕೇಂದ್ರದ ಕೂಗಳತೆಯಲ್ಲಿ, ಜಿಲ್ಲಾದಿಕಾರಿಗಳ ಕಛೇರಿ ಸಮೀಪದಲ್ಲೇ ಬೃಹತ್ ಉಕ್ಕು ಮತ್ತು ವಿದ್ಯುತ್ ಕಾರ್ಖಾನೆ ಸ್ಥಾಪನೆ ಆಗುತ್ತದೆ, ಅದಕ್ಕೆ ಸರಕಾರ, ಜನಪ್ರತಿನಿಧಿಗಳು ವಿಶೇಷವಾಗಿ ಜಿಲ್ಲಾಡಳಿತ ಅದು ಹೇಗೆ ಕಣ್ಣು ಮುಚ್ಚಿಕೊಂಡು ಇಂತಹ ಕಾರ್ಖಾನೆಗೆ ಅನುಮತಿ ನೀಡಿತು ಎಂಬುದು ತಿಳಿಯುತ್ತಿಲ್ಲ. ಇದು ನಮಗೆ ಅತ್ಯಂತ ನೋವಿನ ಸಂಗತಿ, ಹಾಗಾಗಿ ಇದರಲ್ಲಿ ಬೇರೆ ರೀತಿಯ ವಾಸನೆ ಕಾಣಿಸುತ್ತಿದೆ ಎಂದು ದೂರಿದರು.
ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸರಕಾರ ಜನರ ಪರವಾಗಿ ಇರಬೇಕೆ ಹೊರತು ದುಡ್ಡು, ಅಧಿಕಾರ ಮತ್ತು ಲಾಭಿಯ ಪರವಾಗಿ ಇರಬಾರದು. ಒಂದ್ವೇಳೆ ಹಾಗೆ ಮೋಸ ಮಾಡಿದರೆ ಭಗವಂತನೇ ತಕ್ಕ ಶಿಕ್ಷೆ ಕೊಡುತ್ತಾನೆ, ಈಗ ನಮ್ಮ ೨೦ ಹಳ್ಳಿಗಳ ಸಮಸ್ಯೆ ಹಾಗೂ ಕೊಪ್ಪಳ ಭಾಗ್ಯನಗರ ಅವಳಿ ನಗರಗಳ ಸುಮಾರು ೧.೫ ಲಕ್ಷ ಜನರ ಉಸಿರು, ಬದುಕು ಮತ್ತು ಜೀವನದ ಪ್ರಶ್ನೆಯಾಗಿದ್ದು, ಕೂಡಲೇ ಕಾರ್ಖಾನೆ ರದ್ದತಿ ಆದೇಶ ಹೊರಡಿಸಬೇಕು ಇಲ್ಲವಾದರೆ ಇನ್ನಷ್ಟು ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದರು.
ನಿವೃತ್ತ ಉಪನ್ಯಾಸಕ ಎಂ. ಎಸ್. ಸಜ್ಜನ್ ಮಾತನಾಡಿ, ಪ್ರಸ್ತುತ ನಡೆದಿರುವ ಹೋರಾಟ ಯಾರದ್ದೋ ಪರ ಅಥವಾ ವಿರೋಧ ಅಲ್ಲ, ಇದು ಜನರ ಹೋರಾಟ, ಇದರಲ್ಲಿ ಎಲ್ಲಾ ಜಾತಿ ಜನಾಂಗ ಪಕ್ಷದವರು ಭಾಗವಹಿಸಬೇಕಿದೆ. ಈಗಾಗಲೇ ಹಲವಾರು ಹಿರಿಯರು ಸ್ವಾಮೀಜಿವರು ಹೇಳಿದ ಹಾಗೆ ಇದನ್ನು ಜನಾಂದೋಲನ ಮಾಡಬೇಕಿದೆ ಎಂದರು.
ಹೋರಾಟದಲ್ಲಿ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಮಹಾದೇವಪ್ಪ ಮಾವಿನಮಡು, ಡಿ.ಎಂ. ಬಡಿಗೇರ, ಬಸಪ್ಪ ಗುಮಗೇರಿ, ಜಿ.ಬಿ.ಪಾಟೀಲ್, ಸಂಗಪ್ಪ ಗಾಳಿ, ಎಲ್.ಎಚ್. ಪಾಟೀಲ್, ಎಸ್.ಕೆ. ಸಿದ್ನೆಕೊಪ್ಪ, ಜಿ.ಎಸ್. ಅಂಗಡಿ, ಶಂಭುಲಿಂಗಪ್ಪ ಹರಗೇರಿ, ಬಿ.ಆರ್. ಬೀರನಾಯಕ, ದಯಾನಂದ ಸಿ.ಎಸ್, ಮಹಾಬಳೇಶ್ವರ ವಡ್ಡಟ್ಟಿ, ಶಿವರಾಜ ಮಠಪತಿ, ಸಿದ್ದಪ್ಪ ಬಿಸನಳ್ಳಿ, ಐ.ಎಂ.ಚಿಕ್ಕರಡ್ಡಿ, ಕವಯತ್ರಿ ಪುಷ್ಪಲತಾ ಏಳುಬಾವಿ, ಚಲನಚಿತ್ರ ಅಕಾಡಮಿ ಸದಸ್ಯೆ ಸಾವಿತ್ರಿ ಮುಜುಮದಾರ ಅನೇಕರಿದ್ದರು.

