ಜಿಲ್ಲಾ ಕಾಂಗ್ರೆಸ್ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ
ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು ಜಿಲ್ಲಾ ಕಾಂಗ್ರೆಸ್ಗೆ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಡಿಸಿಸಿ ಅಧ್ಯಕ್ಷರು, ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪೂರ ಅವರು ಆದೇಶ ನೀಡಿದರು.
ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡುವವರನ್ನು ಗುರುತಿಸಿ ಹುದ್ದೆಗಳನ್ನು ನೀಡುತ್ತಿದ್ದು, ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ಅವರೂ ಸಹ ಸಕ್ರಿಯ ಕಾರ್ಯಕರ್ತರಾಗಿದ್ದು, ಮೋಚಿ ಸಮುದಾಯಕ್ಕೂ ಒಂದು ಅಧ್ಯತೆ ನೀಡಿ ಅವರ ನೇಮಕ ಮಾಡಿರುವದಾಗಿ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು, ನೂತನ ಕಾರ್ಯದರ್ಶಿಗಳಿಗೆ ಶುಭ ಕೋರಿ ಪಕ್ಷ ಸಂಘಟಿಸುವಂತೆ ಕರೆ ನೀಡಿದರು. ಕಾಂಗ್ರೆಸ್ ನಾಯಕಿ ಜ್ಯೋತಿ ಗೊಂಡಬಾಳ ಅವರು ಮಾತನಾಡಿ, ಮಹಿಳೆರಿಗೆ ಡಿಸಿಸಿಯಲ್ಲಿ ಮೊದಲ ಬಾರಿಗೆ ಹೆಚ್ಚಿನ ಅವಕಾಶ ನೀಡಿದ್ದು ಸಂತಸ ತಂದಿದೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ಮಹಿಳಾ ಶಕ್ತಿಯನ್ನು ಒಗ್ಗೂಡಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಎಸ್. ಬಿ. ನಾಗರಳ್ಳಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಮುಖಂಡರುಗಳಾದ ಸುರೇಶ ದಾಸರಡ್ಡಿ, ಅಕ್ಬರ್ ಪಾಶಾ ಪಲ್ಟನ್, ಸುಮಂಗಲಾ ನಾಯಕ, ಸೌಭಾಗ್ಯ ಗೊರವರ, ಅನಿತಾ ಅಳ್ಳಮ್ಮನವರ, ನವೋದಯ ವಿರುಪಾಕ್ಷಪ್ಪ ಇತರರು ಇದ್ದರು.