ಧರಣಿಗೆ ರಾಜ್ಯ ರೈತ ಸಂಘ ವಿ.ಆರ್.ನಾರಾಯಣರೆಡ್ಡಿ ಬೆಂಬಲ

ವೇದಿಕೆಯ ಪ್ರಮುಖರಿಂದ 35ನೇ ದಿನದಲ್ಲಿ ನಡೆದ ಹೋರಾಟ
ಕೊಪ್ಪಳ: ನಗರಸಭೆ ಆವರಣದಲ್ಲಿ ಕೊ.ಜಿ.ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ನಡೆಸುತ್ತಿರುವ 35ನೇ ದಿನದ ಅನಿರ್ದಿಷ್ಟ ಧರಣಿಯನ್ನು ವೇದಿಯ ಪ್ರಮುಖರಿಂದ ನಡೆಸಲಾಯಿತು. ಪ್ರಧಾನ ಸಂಚಾಲಕರಾದ ಅಲ್ವಮಪ್ರಭು ಬೆಟ್ಟದೂರು ಮಾತನಾಡಿ ಸರಕಾರ ಕೊಪ್ಪಳ ಭಾಗ್ಯನಗರದ ಮೇಲೆ ಪರಿಸರ ಹಾನಿಯ ಕಾರ್ಮೋಡ ಕವಿದಿದ್ದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಉತ್ತರ ಕರ್ನಾಟಕ ಸಮಸ್ಯೆಗಳ ಹೆಸರಿನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಉದ್ದೇಶ ಒಳ್ಳೆಯದಿದ್ದರೂ ಗಂಭೀರ ಸಮಸ್ಯೆಗಳನ್ನು ಕೈಗೆತ್ತಿಕೊಃಡು ಚರ್ಚಿಸುವಂತೆ ಮಾಡಲು ಬಲವಾದ ಜನ ಚಳವಳಿಯ ಒತ್ತಡ ಬೇಕಾಗುತ್ತದೆ. ನಾವು ಈ ಚಳಿಗಾಲದ ಅಧಿವೇಶನದ ಮುಂದೆ ಪ್ರತಿಭಟನೆ ಮಾಡೋಣ ಎಂದು ಹೇಳಿದರು.
ಶುಕ್ರವಾರ 36ನೇ ದಿನದ ಹೋರಾಟವನ್ನು ಬಾಧಿತ ಹಳ್ಳಿಗಳ ರೈತರು ದೊಡ್ಡ ಸಂಖ್ಯೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ವಿ.ಆರ್.ನಾರಾಯಣರೆಡ್ಡಿ ಇವರ ನೇತೃತ್ವದಲ್ಲಿ ಕೇಃದ್ರೀಯ ಬಸ್ ನಿಲ್ದಾಣದ ಮುಂದಿನ ಸಂತಶ್ರೇಷ್ಠ ಕನಕದಾಸ ವೃತ್ತದಿಂದ ಆರಂಭವಾಗಿ ಅಶೋಕ ವೃತ್ತದವರೆಗೆ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಬಂದು ಅಲ್ಲಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಕೊಟ್ಟು ನಗರಕ್ಕೆ ಹೊಂದಿಕೊಂಡ ಬಲ್ಡೋಟಾ ವಿಸ್ತರಣೆ ಮಾಡಬಾರದೆಂದು ಆಗ್ರಹಿಸುತ್ತಾರೆ ಎಂದು ಹೇಳಿದರು.
ಧರಣಿಯಲ್ಲಿ ನಿವೃತ್ತ ಉಪನ್ಯಾಸಕರು ಶಂಭುಲಿಂಗಪ್ಪ ಹರಗೇರಿ, ನಿವೃತ್ತ ಅಂಚೆ ಅಧಿಕಾರಿ ರವಿ ಕಾಂತನವರ, ಎಫ್.ಎಸ್. ಜಾಲಿಹಾಳ, ಮಹಾದೇವಪ್ಪ ಮಾವಿನಮಡು, ಮಲ್ಲಿಕಾರ್ಜುನ ಗೋನಾಳ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಖಬೂಲ ರಾಯಚೂರು, ಮಂಜುನಾಥ ಹಲಗೇರಿ, ಭೀಮಪ್ಪ ಯಲಬುರ್ಗಾ, ಬಸವರಾಜ ಶೀಲವಂತರ, ಕೇಶವ ಕಟ್ಟಿಮನಿ ಇದ್ದರು.

